Use Baraha fonts to read this blog.. http://www.baraha.com

Monday, April 09, 2007

ಇರದವರ ನಡುವೆ ಉಳ್ಳವನಾಗಬೇಡ..!

ಬೆಳಿಗ್ಗೆ ಒಂಬತ್ತೂವರೆಗೆ ಆಫ಼ೀಸಿಗೆ ತಡವಾಗಿ ಮೆಜೆಸ್ಟಿಕ್‍ನಲ್ಲಿ ಬಸ್ಸಿಗೆ ಕಾಯ್ತಾ ಇರೋರನ್ನ, ಎಮರ್ಜೆನ್ಸಿಲ್ಲಿರೋ ರೋಗಿಗಳನ್ನ ಕರ್ಕೊಂಡು ಹೋಗ್ತಾ ಟ್ರಾಫ಼ಿಕ್‍ನಲ್ಲಿ ಸಿಕ್ಕಾಕ್ಕೊಂಡು ಅಂಬುಲೆನ್ಸಲ್ಲಿ ಕೂತಿರೋ ಪೇಶಂಟ್ ಕಡೆಯವರ್ನಾ ಒಮ್ಮೆ ಕೇಳಿ ನೋಡಿ "ಈ ಕಾವೇರಿ ಚಳುವಳಿಗೆ ಒಳ್ಳೇ ಸಹಕಾರ ಕೊಡ್ತಾ ಇದೀರಾ" ಅಂತ. ಕನ್ನಡದಲ್ಲಿ ಇರೋ ಕೆಟ್ಟ ಶಬ್ದಾನೆಲ್ಲಾ ಉಪಯೋಗಿಸಿ ಉಗೀತಾರೆ. ಯಾವುದೇ ಚಳುವಳಿ ಜನ ಬೆಂಬಲ ಇಲ್ದೇ ಮಹತ್ವ ಕಳಕೊಳ್ಳೋದೆ ಹೀಗೆ.
ಬಸ್ಸು ಸುಟ್ಟು, ಲೂಟಿ ಮಾಡಿದ್ರೆ ಸರ್ಕಾರ ಕಾವೇರಿ ನೀರು ಕೊಡತ್ತಾ, ಲಾಠಿ ಚಾರ್ಜ್ ಮಾಡತ್ತಾ? ಜನತಾದಳ ಇರಲಿ, ಸಮ್ಮಿಶ್ರ ಇರಲಿ ಅಥವಾ ಕಾಂಗ್ರೆಸ್ ಇರಲಿ, ಸರ್ಕಾರಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡೋ ಜವಾಬ್ದಾರಿ ಇದೆ. ಅದರ ಇತಿಮಿತಿಯಲ್ಲಿ ಕಾರ್ಯ ನಡೆಸುವುದು ಅನಿವಾರ್ಯ ಕೂಡಾ.
ಇದೇ ಮಾತನ್ನ ಐದುವರೆ ಕೋಟಿ ಕನ್ನಡಿಗರು ಹೇಳಿದರೆ ಅದಕ್ಕೆ ಬೇರೇ ಅರ್ಥ; ಇನ್ಫ಼ೊಸಿಸ್ ನಾರಾಯಣಮೂರ್ತಿ ಹೇಳಿದ್ರೆ ಇನ್ನೊಂದು ಅರ್ಥ. ಕನ್ನಡ ಮಾಧ್ಯಮ ವರದಿಗಾರರಿಗೆ ಮೂರ್ತಿಯವರನ್ನ ಕೆಣಕೋದು, ಏನಾದ್ರೂ ವಿವಾದಾತ್ಮಕ ಘಟನೆ ಬಗ್ಗೆ ಮಾತಾಡಿದ್ರೆ ಅದನ್ನ ತಿರುಚೋದು, ಇವೆರಡೇ ಕೆಲಸ ಅಂತ ಅನಿಸ್ತದೆ. ರವಿ ಬೆಳಗೆರೆಯಂತೂ ಪ್ರತಿ ವಾರ ಕೆಲ ಪುಟಗಳನ್ನ ನಾರಯಣಮೂರ್ತಿಯವರಿಗೇ ಮೀಸಲಿಟ್ಟ ಹಾಗಿದೆ. ಆಶ್ಚರ್ಯದ ಸಂಗತಿಯೆಂದರೆ, ನಾವ್ಯಾರೂ ಅಥವಾ ಇನ್ಯಾರೂ ರವಿ ಬೆಳಗೆರೆ ಬೆಂಜ಼್ ಕಾರಲ್ಲಿ ತಿರುಗಾಡುವುದರ ಬಗ್ಗೆ, ಅಥವಾ ಅವರ ಪತ್ರಿಕೆ ತೆರಿಗೆ ಸವಲತ್ತು ಉಪಯೋಗಿಸಿಕೊಂಡಿದ್ದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ರವಿ ಬೆಳಗೆರೆ ಅಂತಲ್ಲ, ಇದು ಇತರೆ ತೆಗಳುವ ಪತ್ರಿಕೋದ್ಯಮಿಗಳ ಸಂಕುಲಕ್ಕೂ ಅನ್ವಯವಾಗುತ್ತದೆ. ಅವರಿಗೆ ತೆಗಳಲು ಅವಕಾಶ ಮಾಡಿಕೊಟ್ಟು ಪತ್ರಿಕೆ ಪ್ರಸಾರಕ್ಕೆ ಸಹಕರಿಸಿದ್ದಕ್ಕಾದರೂ ಮೂರ್ತಿಗಳಿಗೆ ಇವರು ಕೃತಜ್ನರಾಗಿರಬೇಡವೆ ಅಂತ ಕೇಳುವುದು ಕುಚೋದ್ಯವಾಗಬಹುದು.
ಮೂರ್ತಿಗಳು ಏನು ಮಾಡಿದಾರೆ ಅಥವಾ ಏನು ಮಾಡಿಲ್ಲ ಅನ್ನೋ ಮಾತು ಬಿಡಿ, ಅದು ಅವರ ವೈಯಕ್ತಿಕ ವಿಷಯ. ಕಷ್ಟದಲ್ಲಿದ್ದವರಿಗೆ ನೆರವಾಗುವುದು, ಸಮಾಜಕ್ಕೆ ಹೋರಾಟ ನಡೆಸುವುದು ಇವೆಲ್ಲಾ ಶ್ರೀಮಂತರಿಂದ ಮಾತ್ರ ಸಾಧ್ಯ ಅನ್ನುವುದೂ ಸುಳ್ಳು. ಅದು ವ್ಯಕ್ತಿಯ ಇಷ್ಟಾನಿಷ್ಟಕ್ಕೆ ಬಿಟ್ಟಿದ್ದು; ಆದರೆ ಅದೇ ಕಾರಣಕ್ಕೆ ಆ ವ್ಯಕ್ತಿಯನ್ನು ಪ್ರತಿದಿನ ಕೆಣಕಿ, ಮಾಧ್ಯಮದ ಮೂಲಕ ಉಸಿರುಕಟ್ಟಿಸುವುದು ಖಂಡಿತಾ ಸರಿಯಲ್ಲ. ಪ್ರಚೋದನಾತ್ಮಕ ಬರಹಗಳು ಅರಿಯದ ಮನವನ್ನು ಕೆಡಿಸುವುದು ಸುಳ್ಳಲ್ಲ. ರಾಜ್ಯಕ್ಕಾಗುವ ಲಾಭ ನಷ್ಟದ ಮಾತು ಹಾಗಿರಲಿ, ನಮ್ಮೆಲ್ಲರ ನಡುವೆ ನಿತ್ಯ ನಡೆದಾಡುವ ನಾರಾಯಣಮೂರ್ತಿ, ಪ್ರೇಂಜೀ ಮುಂತಾದವರನ್ನ ಸಮಾಜದ ಅನಾಗ್ರಹಕ್ಕೆ ತುತ್ತಾಗುವಂತೆ ಮಾಡುವುದು ಖಂಡಿತಾ ಸರಿಯಲ್ಲ.
ಐಟಿ ಉದ್ಯಮಿಗಳು ಬಂಡವಾಳಶಾಹಿಗಳು, ಸಮಾಜ ಕಂಟಕರು ಎಂದೆಲ್ಲಾ ಬಿಂಬಿಸುವ ಮಾಧ್ಯಮಗಳು ನಮ್ಮದೇ ಟಾಟಾ, ಬಿರ್ಲಾ, ಅಂಬಾನಿ ಉದ್ಯಮ ಸಮೂಹ ಹೊರದೇಶಗಳಲ್ಲಿ ಕಂಪೆನಿಗಳನ್ನು ಖರೀದಿಸಿದರೆ ಹೊಗಳುತ್ತವೆ. ಬಂಡವಾಳವಿಲ್ಲದೇ ಖರೀದಿ ಹೇಗೆ ಸಾಧ್ಯವಾಯಿತು ಎಂದು ಯೋಚಿಸುವುದಿಲ್ಲವೇ? ನಮ್ಮಲ್ಲಿ ವರ್ಣಬೇಧವಿಲ್ಲದಿದ್ದರೂ, ವರ್ಗಬೇಧವಿದೆ ಎನ್ನಬಹುದೇ? ಇಂದಿನ ಐಟಿ ಉದ್ಯಮಿಗಳಲ್ಲಿ ಹೆಚ್ಚಿನವರು ಮಧ್ಯಮವರ್ಗ ಮೂಲದಿಂದ ಬಂದು, ಉನ್ನತವರ್ಗಕ್ಕೆ ಜಿಗಿದವರು. ಯಾವುದೇ ಜಿಗಿತಕ್ಕೆ ಶಕ್ತಿಯ ಅವಶ್ಯಕತೆಯಿದೆ; ತೊಂಬತ್ತರ ದಶಕದಲ್ಲಿ ಉತ್ಪನ್ನವಾದ ಆರ್ಥಿಕ ನೀತಿಯನ್ನೇ ಚಿಮ್ಮು ಹಲಗೆಯಾಗಿ ಉಪಯೋಗಿಸಿ ಮಧ್ಯಮವರ್ಗದಿಂದ ಉನ್ನತವರ್ಗಕ್ಕೆ ಜಿಗಿದವರು ಇವರು. ಸರಿ, ನಮಗೆ ಅವರಂತೆ ಜಿಗಿಯಲು ಸಾಧ್ಯವಿದ್ದರೆ ಜಿಗಿಯಬೇಕು, ಇಲ್ಲವಾದರೆ, ಆರಾಮಾಗಿರಬೇಕು. ಅದನ್ನ ಬಿಟ್ಟು ಅವರ ಪ್ರತಿ ಚಲನವಲನಗಳನ್ನು ಮಾಧ್ಯಮದ ಮೂಲಕ ತೆಗಳಿ ಈರ್ಶ್ಯೆ ತೀರಿಸಿಕೊಳ್ಳುವವರನ್ನು ಯಾವುದರಲ್ಲಿ ಹೊಡೆಯಬೇಕು?

- ಕನ್ನಡಿಗ

4 comments:

The Skylark (banadi) said...

ಅವರಿಗೆ ಹೊಡೆಯುವುದಕ್ಕಿಂತ
ನಾವು ಅವರಿಗೆ ಹೊದೆಯಲು ಕೊಡಬೇಕು
ಕಂಬಳಿ, ಚಾದರ
ಮೊದಲು ಜಾಣರಾಗಿ
ಮತ್ತೆ ಉಳಿದ ಜಾಣರು
ಜಾರುವಾಗ
ಎತ್ತಿ ಇಡಿ
ಅವರ ಲುಂಗಿ, ಲಂಗ!

Vijendra ( ವಿಜೇಂದ್ರ ರಾವ್ ) said...

100% ಸರಿ ಮಾತು. ರವಿ ಬೆಳಗೆರೆಗೆ ಬೇರೆ ಕೆಲಸವೇ ಇಲ್ಲವೋ ಏನೋ ಅಂತ ಅನ್ನಿಸ್ತಾ ಇದೆ ಈಗೀಗ. ದೇವೆ ಗೌದ್ರಿಗೂ ಇದೊಂದು ಮೆಚ್ಚಿನ ಹವ್ಯಾಸ ಆಗಿದೆ ಅಂತ ಅನ್ನಿಸ್ತಾ ಇದೆ..

Anonymous said...

ನಗುವು ಸಹಜದ ಧರ್ಮ
ನಗಿಸುವುದು ಪರ ಧರ್ಮ
ನಗುವ ನಗಿಸುತ ನಗಿಸಿ
ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ-
ಎಂದವರು ಡಿ.ವಿ.ಜಿ. ಜೀವನವನ್ನು ನೋಡುವ ದೃಷ್ಟಿಯಲ್ಲಿ ನವಿರಾದ ಹಾಸ್ಯವನ್ನು ಬೆರೆಸಿಕೊಂಡು ಬಿಟ್ಟರೆ ಯಾವ ಕಷ್ಟಗಳೂ ನಮ್ಮನ್ನು ಕುಗ್ಗಿಸುವುದಿಲ್ಲ, ಅವಮಾನಗಳು ನಮ್ಮನ್ನು ನಿರ್ನಾಮ ಮಾಡುವುದಿಲ್ಲ. ಹಾಸ್ಯ ಶಾಕ್ ಅಬ್ಸಾರ್ವರ್‌ನಂತೆ ಆಘಾತಗಳನ್ನು ತಾಳಿಕೊಳ್ಳಬಲ್ಲ ಶಕ್ತಿಯನ್ನು ಕೊಡುತ್ತದೆ.
ಕನ್ನಡದಲ್ಲಿ ವೈವಿಧ್ಯಮಯ ಹಾಸ್ಯಕ್ಕಾಗಿ ಮೀಸಲಾದ ಬ್ಲಾಗ್ ‘ನಗೆ ನಗಾರಿ ಡಾಟ್ ಕಾಮ್’.
ವಿಳಾಸ: http://nagenagaaridotcom.wordpress.com/

ದಯವಿಟ್ಟು ಒಮ್ಮೆ ಇಲ್ಲಿ ಭೇಟಿಕೊಡಿ. ನಿಮ್ಮ ಮುಖದ ಮೇಲೆ ತೆಳುನಗೆಯ ಗೆರೆ ಮೂಡದಿದ್ದರೆ ಕೇಳಿ. ಇಷ್ಟವಾದರೆ ನಿಮ್ಮ ಬ್ಲಾಗ್ ಫೀಡಿನಲ್ಲಿ ಇದನ್ನು ಸೇರಿಸಿಕೊಳ್ಳಿ, ಮೆಚ್ಚುಗೆಯಾದರೆ ನಿಮ್ಮ ಇತರೆ ಗೆಳೆಯ, ಗೆಳತಿಯರಿಗೆ ಇದರ ಬಗ್ಗೆ ತಿಳಿಸಿ.

ನಗೆ ಸಾಮ್ರಾಟ್

Shwetha said...

http://www.freekannada.com