ದಂತವೈದ್ಯೋ ನಾರಾಯಣೋ ಹರಿ:
ಪ್ರಾಮಾಣಿಕವಾಗಿ ಹೇಳುತ್ತೇನೆ; ಹತ್ತು ವರುಷಗಳ ಹಿಂದೆ ನನಗೆ ದಂತವೈದ್ಯ ವೃತ್ತಿಯ ಬಗ್ಗೆ ಉತ್ತಮ ಅಭಿಪ್ರಾಯವೇನೂ ಇರಲಿಲ್ಲ. ಭಗವಂತ ದಯಪಾಲಿಸಿದ ಹಲ್ಲುಗಳು ಇನ್ನೂ ಹೊಸದಾಗಿದ್ದವು. ದೂರದರ್ಶನದಲ್ಲಿ "ರಾಮಾಯಣ" ಧಾರಾವಾಹಿಯ ಮೊದಲು ಬರುತ್ತಿದ್ದ ಜಾಹೀರಾತಿನ ಸಲಹೆಯಂತೆ ಡಾಬರ್ ಕೆಂಪು ಹಲ್ಲುಪುಡಿ ಬಳಸಿ ನನ್ನ ಹಲ್ಲುಗಳನ್ನು ಬೆಳ್ಳಗೆ ಇರಿಸಿದ್ದೆ. ದಂತವೈದ್ಯರೆಂದರೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಎಂ ಬಿ ಬಿ ಎಸ್ ಸೀಟು ಸಿಗದ ನಿರಾಶಿಗಳು ಇಲ್ಲವೇ ಪಿತ್ರಾರ್ಜಿತವಾಗಿ ಬಂದಂಥ ದಂತವೈದ್ಯಾಲಯವಿದ್ದು ಅದರ ಮೂಲಕ ಉದರಂಭರಣಂ ಮಾಡುವ ಉದ್ದೇಶದಿಂದ ದಂತವೈದ್ಯ ವೃತ್ತಿಯನ್ನು ಪರಿಗಣಿಸಿದವರು ಎಂದು ನನ್ನ ದೃಢ ನಂಬಿಗೆಯಾಗಿತ್ತು. ಅಲ್ಲದೇ ನಾನು ಭೇಟಿ ನೀಡಿದ ಕೆಲ ದಂತ ವೈದ್ಯರ ಸಲಹೆ ಕೂಡಾ ನನಗೆ ರುಚಿಸಿರಲಿಲ್ಲ. ಸುಮ್ಮನೇ, ಹಲ್ಲಿನ ಜೊತೆಗೆ ಹಣವನ್ನೂ ಕೀಳುವ ವ್ಯವಸ್ಥೆ ಇವರದು ಎಂದು ಭಾವಿಸಿದ್ದೆ.
ಆನುವಂಶಿಕವಾಗಿ ನನ್ನದು ದಂತರೋಗಿಗಳ ಕುಟುಂಬ; ಅಪ್ಪನ ಒರಿಜಿನಲ್ ಹಲ್ಲುಗಳನ್ನೇ ನೋಡಿರದ ನಾನು ಅಮ್ಮನ ಹುಳುಕು ಉಬ್ಬುಹಲ್ಲುಗಳನ್ನು ನೋಡಿದ್ದೆ. ಹುಳುಕು ಹಲ್ಲಿನ ನೋವಿನಿಂದ ತಾವು ಪಟ್ಟ ಬವಣೆ, ನೋವು ಮಕ್ಕಳಿಗೆ ಬೇಡ ಎಂಬ ಸದುದ್ದೇಶದಿಂದ ನಮ್ಮನ್ನು ಮೊದಲಿನಿಂದಲೇ ಸರಿಯಾಗಿ ಹಲ್ಲುಜ್ಜುವ ಶಿಸ್ತಿಗೆ ಗುರಿಪಡಿಸಿದ್ದ ನನ್ನ ಹಿರಿಯರು ಆರೋಗ್ಯಕರ ದಂತ ಜೀವನಕ್ಕೆ ನಾಂದಿ ಹಾಡಿದ್ದರು. ಹೀಗಾಗಿ ವಾರ್ಷಿಕ ದಂತವೈದ್ಯರ ಭೇಟಿ ನಮ್ಮ ಅಭ್ಯಾಸವಾಗಿತ್ತು. ಹೀಗೇ ಒಂದು ವಾರ್ಷಿಕ ಭೇಟಿಯ ಸಂದರ್ಭದಲ್ಲಿ ದವಡೆಯ ಕೊನೆಯ ಹಲ್ಲನ್ನು ನೋಡಿದ ವೈದ್ಯರು "ಇದೇನು ಕೆಂಡದಂತೆ ಕಪ್ಪಾಗಿದೆಯಲ್ಲ? ನೋವಿದೆಯಾ?" ಎಂದು ಕೇಳಿದಾಗ ಬಾಯಲ್ಲಿ ಉತ್ತರಿಸಲಾಗದೇ ಇಲ್ಲವೆಂಬಂತೆ ತಲೆ ಅಲ್ಲಾಡಿಸಿದ್ದೆ. ಅದನ್ನು ಅವರು ನಂಬಲಿಲ್ಲ; ದಂತವೈದ್ಯಾಯುಧಗಳಲ್ಲೊಂದಾದ ಸಣ್ಣ ಸುತ್ತಿಗೆಯಂಥ ವಸ್ತುವಿನಲ್ಲಿ ಎರಡು ಬಾರಿ ಆ ಹಲ್ಲನ್ನು ಮೊಟಕಿ "ಈಗ?" ಎಂದು ಪುನ: ಕೇಳಿದರು. "ಇನ್ನೇನು? ಸುತ್ತಿಗೆಯಲ್ಲಿ ಮೊಟಕಿದರೆ ಎಂಥಾ ಹಲ್ಲೂ ನೋಯುತ್ತದೆ" ಎಂದು ಉತ್ತರಿಸುವ ಮನಸ್ಸಾದರೂ ವಾಸ್ತವದಲ್ಲಿ ನನಗೆ ನೋವಿರದಿದ್ದರಿಂದ "ನೋವೇನೂ ಇಲ್ಲ" ಎಂದು ತೆರೆದ ಬಾಯಲ್ಲೇ ಹಸನ್ಮುಖಿಯಾಗಿ ಸಂಜ್ಞೆ ನೀಡಿದ್ದೆ. ಇದರಿಂದ ತುಸು ನಿರಾಶೆಗೊಂಡಂತೆ ತೋರಿದರೂ, ವೃತ್ತಿ ಧರ್ಮದಂತೆ "ತೊಂದರೆಯೇನೂ ಇರದಿದ್ದರೆ ಹಾಗೇ ಇರಲಿ ಬಿಡಿ" ಎಂದು ಸಲಹೆ ನೀಡಿ "ಉಳಿದಂತೆ ಎಲ್ಲಾ ಚೆನ್ನಾಗಿದೆ, ಆದರೆ ಉಜ್ಜುವ ಕ್ರ್ಅಮ ಸ್ವಲ್ಪ ಬದಲಾದರೆ ಒಳ್ಳೆಯದು" ಎಂದು ಹದಿನೈದು ನಿಮಿಷ ಕೊರೆದಿದ್ದರು. ಈ ಘಟನೆ ದಂತವೈದ್ಯರ ಬಗೆಗಿನ ನನ್ನ ಅಭಿಪ್ರಾಯವನ್ನೇನೂ ಬದಲಿಸದಿದ್ದರೂ ತುಸು ಉತ್ತಮಗೊಳಿಸಿತ್ತು.
ಮುಂದಿನ ಎರಡು ವರುಷಗಳು ಯೋಚನೆಯಿಲ್ಲದೇ ಸಾಗಿದವು. ಮೂರನೇ ವರುಷದ ಭೇಟಿಯ ಸಂದರ್ಭದಲ್ಲಿ ನನ್ನ ಜ್ಞಾನದಂತ ತುಸು ತೊಂದರೆ ನೀಡುತ್ತಿತ್ತು. ಅದೇ ತಾನೆ ಚರ್ಮ ಸೀಳಿ ಹೊರಬರುವ ಪ್ರಯತ್ನದಲ್ಲಿದ್ದ ಜ್ಞಾನದಂತ ಭಾರೀ ನೋವನ್ನೇ ನೀಡಿತ್ತು. "ದಂತವೈದ್ಯ ಕಾಲೇಜಿಗೇ ಭೇಟಿ ನೀಡು, ಒಳ್ಳೇ ಟೈಮ್ ಪಾಸ್" ಎಂದು ಸಲಹೆ ನೀಡಿದ್ದ ಸ್ನೇಹಿತರನ್ನು ಧಿಕ್ಕರಿಸಿ ವೃತ್ತಿಪರ ವೈದ್ಯರ ಅಂಗಡಿಗೆ ದೌಡಾಯಿಸಿದ್ದೆ. ಎಲ್ಲಾ ದಂತವೈದ್ಯರಂತೆ ಇವರ ಹಲ್ಲೂ ಬೆಳ್ಳಗಿತ್ತು. ಪ್ರತೀ ವೃತ್ತಿಗೂ ಒಂದು ಕೊರತೆ ಇದ್ದೇ ಇರುತ್ತದಲ್ಲವೇ? ಗಿರಾಕಿಗಳಿಗೆ ಕೊಲ್ಗೇಟ್ ನಗೆ ಬೀರುವ ಅನಿವಾರ್ಯತೆಯಿಂದ ಪಾನ್ ಮಸಾಲಾ, ಗುಟ್ಕಾದಂತ ರುಚಿಕರ ವಸ್ತುಗಳನ್ನು ಅಗಿಯುವ ಬಯಕೆಯನ್ನು ಅವರು ಅದುಮಿಟ್ಟುಕೊಳ್ಳಬೇಕಾಗುತ್ತದಲ್ಲ, ಎಂದು ನನಗೆ ಕನಿಕರವೆನಿಸಿತು. "ಜ್ಞಾನದಂತದಿಂದ ಪ್ರಯೋಜನವೇನೂ ಇಲ್ಲ, ಅದನ್ನು ಕೀಳೋಣ " ಎಂದ ಅವರ ಸಲಹೆ ನನಗೆ ರುಚಿಸಲಿಲ್ಲ. ಅದೇ ತಾನೇ ಕಾಲೇಜು ಮುಗಿಸಿದ್ದ ಅವರು ಇನ್ನೂ ಎಳಸು ಎಂದು ಅಭಿಪ್ರಾಯಿಸಿ "ಆಯಿತು ಅತೀ ಶೀಘ್ರ್ಅ ಭೇಟಿ ಗೊತ್ತುಪಡಿಸುತ್ತೇನೆ" ಎಂದು ಸುಳ್ಳು ಹೇಳಿ ಅಲ್ಲಿಂದ ಕಾಲ್ಕಿತ್ತೆ. ಅದೇ ನನ್ನ ಕೊನೆಯ ಭೇಟಿಯಾಯಿತು.
ಕೆಲ ವರುಷಗಳ ಹಿಂದೆ ವೃತ್ತಿ ಅರಸುತ್ತ ಬೆಂಗಳೂರಿಗೆ ವರ್ಗಾವಣೆಯಾಗಿದ್ದ ನಾನು ಮೊದಲು ಮಾಡಿದ ಕೆಲಸಗಳಲ್ಲೊಂದು, ದಂತ ವೈದ್ಯರನ್ನು ಹುಡುಕಿದ್ದು. ಅವರ ಬಗ್ಗೆ ಉತ್ತಮ ಅಭಿಪ್ರಾಯಗಳನ್ನು ಕೇಳಿದ್ದ ನಾನು ಶೀಘ್ರದಲ್ಲೇ ಒಂದು ಭೇಟಿಯನ್ನು ಗೊತ್ತುಪಡಿಸಿದೆ. ಅವರ ಶೈಕ್ಷಣಿಕ ಸಾಧನೆಯ ಬಗ್ಗೆ ಕುತೂಹಲಿಯಾಗಿದ್ದ ನಾನು, ಸರ್ಕಾರಿ ದಂತವೈದ್ಯ ಕಾಲೇಜು, ಬೆಂಗಳೂರಿನ ಸ್ವರ್ಣ ಪದಕ ವಿಜೇತ ವೈದ್ಯರು ಎಂದು ತಿಳಿದಾಗ ಪರವಾಗಿಲ್ಲ ಎಂ ಬಿ ಬಿ ಎಸ್ ಸೀಟು ಮಿಸ್ ಆದವರಲ್ಲಿ ಉನ್ನತ ಶ್ರ್ಏಣಿಯ ವಿದ್ಯಾರ್ಥಿ ಎಂದು ಕಟಕಿಯಾಡಿದ್ದೆ. ಆದರೆ ಭೇಟಿಯ ಸಂದರ್ಭದಲ್ಲಿ ನನಗೊಂದು ಆಘಾತ ಕಾದಿತ್ತು. ಬಲಭಾಗದ ಮೇಲ್ಪಂಕ್ತಿಯ ಸಾಲಿನ ಮೂರನೇ ಹಲ್ಲು ಹುಳುಕು ಹಿಡಿಯುವ ಹಾದಿಯಲ್ಲಿದೆ ಎಂದು ವೈದ್ಯರು ಬಹಿರಂಗ ಪಡಿಸಿದರು. "ಅದನ್ನು ಸ್ವಚ್ಛಪಡಿಸಿ ಟೋಪಿ ತೊಡಿಸುವ" ಎಂದು ಸಲಹೆ ನೀಡಿದರು. ಹಲ್ಲಿನ ಟೋಪಿಯದೂ ಕಾಸಿಗೆ ತಕ್ಕ ಕಜ್ಜಾಯದ ವ್ಯವಹಾರ.
ಉಳ್ಳವರು ಬಂಗಾರದ ಟೋಪಿ ತೊಡಿಸುವರು
ಮುರುಕು ಹಲ್ಲಿಗೆ, ನಾನೇನ ಮಾಡಲಿ ಬಡವನಯ್ಯ ||
ಎಂದು ಯೋಚಿಸಿದರೂ, ಬಾಳಿಕೆಯ ದೃಷ್ಟಿಯಿಂದ ಬೆಳ್ಳಿಯ ಟೋಪಿಯನ್ನೇ ಆಯ್ಕೆ ಮಾಡಿದೆ. ಇನ್ನು ಟೋಪಿ ತೊಡಿಸುವ ಕಾರ್ಯವಾದರೂ ಅತಿ ಸುಲಭವೇನಲ್ಲ. ಸರಿಯಾದ ಅಳತೆ ನೀಡಿ, ವಾರವೊಂದರ ನಂತರದ ದಿನವೊಂದನ್ನು ಗೊತ್ತುಪಡಿಸಿದರು. ಈ ಬಾಯಿಯೂ ಒಂದು ವಿಚಿತ್ರ ಅಂಗ. ದಂತವೈದ್ಯಾಲಯದಲ್ಲಿ ಕುರ್ಚಿಯ ಮೇಲೆ ಪವಡಿಸಿ, ಬಾಯಿ ಅಗಲಿಸುವ ಯಂತ್ರ ಧರಿಸಿದೊಡನೇ ಜೊಲ್ಲು ಹರಿಯಲು ಶುರುವಾಗುತ್ತದೆ. ವೈದ್ಯರ ಸಲಕರಣೆಗಳ ಪರಿಣಾಮವೋ ಅಥವಾ ಸಹಾಯಕ ನರ್ಸ್ ಕಾರಣವೋ ನಿರ್ಧರಿಸುವುದು ಕಷ್ಟ. ಸ್ವಚ್ಛಗೊಳಿಸುವ ನಳಿಕೆ, ಸಕಲ ಸಲಕರಣೆಗಳೊಂದಿಗೆ ಸನ್ನದ್ಧರಾದ ವೈದ್ಯರು ಹಲ್ಲಿಗೆ ಟೋಪಿ ಅಳವಡಿಸಿದರು. ಅದರ ಮುಂದಿನ ಹಂತ ದಂತಟೋಪಿಯನ್ನು ಅದರ ಸ್ಥಾನದಲ್ಲಿ ಪಲ್ಲಟಗೊಳ್ಳದಂತೆ ಕೂರಿಸುವುದು. ಇನ್ನೇನು ಸುತ್ತಿಗೆಯಲ್ಲಿ ಬಡಿಯಬಹುದು ಎಂದುಕೊಂಡಿದ್ದ ನನಗೆ ವೈದ್ಯರು ಮರದ ಆಯತಾಕಾರದ ಚೂರೊಂದನ್ನು ತಂದಾಗ ಆಶ್ಚರ್ಯ. ಅದನ್ನು ಬಾಯಲ್ಲಿರಿಸಿ "ಗಟ್ಟಿಯಾಗಿ ಅಗಿಯಿರಿ" ಎಂದರು. ಅಂದು ಅಳವಡಿಸಿದ ದಂತಟೋಪಿ ಐದು ವರುಷಗಳ ನಂತರವೂ ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದೆ. ವಿದೇಶೀ ಸಲಕರಣೆಗಳೊಂದಿಗೆ ದೇಶೀ ಮರದ ಚೂರನ್ನು ದಂತವೈದ್ಯಾಯುಧ ಬತ್ತಳಿಕೆಯಲ್ಲಿರಿಸಿಕೊಂಡ ವೈದ್ಯರು ನನ್ನ ಅಭಿಪ್ರಾಯವನ್ನು ಗಣನೀಯವಾಗಿ ಬದಲಿಸಿದ್ದರು.
ವೃತ್ತಿಸಂಬಂಧ ಅಮೇರಿಕಾಕ್ಕೆ ಬಂದ ಮೇಲೂ ದಂತವೈದ್ಯರ ಭೇಟಿಯನ್ನು ಮುಂದುವರೆಸಿದ್ದೆ. ಕಳೆದ ತಿಂಗಳು ಬಲಭಾಗದ ಜ್ಞಾನದಂತ ನೋವಲು ಆರಂಭಿಸಿತು. ಮೇಲಿನ ಪಂಕ್ತಿಯೋ, ಕೆಳಗಿನ ಪಂಕ್ತಿಯೋ ಎಂದು ನಿರ್ಧರಿಸಲಾಗದಷ್ಟು ನೋವು. ಈ ಬಾರಿ ಬಿಳಿಹಲ್ಲಿನ ಬಿಳಿವೈದ್ಯರು ನನ್ನ ದಂತ ಪರೀಕ್ಷೆ ಮಾಡಿ "ನೋಡಿ, ಈ ಜ್ಞಾನದಂತದಿಂದ ಪ್ರಯೋಜನವೇನೂ ಇಲ್ಲ, ಅದನ್ನ ಕೀಳುವ" ಎಂದು ಅಭಿಪ್ರಾಯಪಟ್ಟರು. ಇದೇ ಅಭಿಪ್ರಾಯವನ್ನು ಹಿಂದೆ ಧಿಕ್ಕರಿಸಿದ್ದರೂ ಇಂದಿನ ಪರಿಸ್ಥಿತಿ ಭಿನ್ನವಾಗಿತ್ತು. ಜೀವ ಕೀಳುವ ನೋವಿನಿಂದ ದಂತವೈದ್ಯೋ ನಾರಾಯಣೋ ಹರಿ: ಎಂದು ನಮಿಸಿದೆ.
- ಕನ್ನಡಿಗ

